ಬೇಯೀಸ್, ತಾಮಸ್
1702-61. ಇಂಗ್ಲೆಂಡಿನ ಗಣಿತವಿದ. ಗಣಿತ ವಿಷಯಗಳ ಪ್ರತಿಪಾದನೆಯಲ್ಲಿ ಅನುಗಮನಾತ್ಮಕ ಅನುಮಿತೀಯ ವಿಧಾನವನ್ನು ಸಾರ್ವತ್ರಿಕವಾಗಿ ಮೊತ್ತಮೊದಲು ಬಳಕೆಗೆ ತಂದವ. ಅಧ್ಯಯನಾನಂತರ ಇಗರ್ಜಿಯಲ್ಲಿ ಮಠಾಧಿಕಾರಿ ಹುದ್ದೆ ಸ್ವೀಕರಿಸಿದ (1720). 1731ರಲ್ಲಿ ದೈವಕೃಪೆ ಎಂಬ ಕೃತಿ ರಚಿಸಿದ. ದೇವರ ಕೃಪೆಯ ಪರಮೋದ್ದೇಶ ತನ್ನ ಸೃಷ್ಟಿಯ ಜೀವರಾಶಿಗಳ ಸುಖಸಂತೋಷವೇ ಎಂಬ ತತ್ತ್ವವನ್ನು ಗಣಿತತರ್ಕ ರೀತಿಯಲ್ಲಿ ಪ್ರತಿಪಾದಿಸಿ ಕೊಡುವ ಪ್ರಯತ್ನ ಮಾಡಿದ್ದಾನೆ. ಪ್ರವಾಹ ಸಿದ್ಧಾಂತ ಮತ್ತು ಅನಂತಸ್ಪರ್ಶಿ ಶ್ರೇಣಿಗಳು ಎಂಬ ವಿಷಯಗಳ ಮೇಲೆ ಪ್ರೌಢ ಲೇಖನ ಬರೆದ.

	ಸಂಭಾವ್ಯತಾ ಸಿದ್ಧಾಂತದಲ್ಲಿ ಪ್ರತಿಲೋಮ ಸಂಭಾವ್ಯತೆ ಎಂಬ ಪರಿಕಲ್ಪನೆ ಸೃಷ್ಟಿಸಿದ. ಪರಸ್ಪರ ಸ್ವತಂತ್ರವಾದ ಘಟನೆಗಳಲ್ಲಿ ಸಾಪೇಕ್ಷ ಆವರ್ತಾಂಕ m:ಟಿ ಆಗಿದ್ದರೆ ಆರಂಭದಲ್ಲಿ ಈ ಸಂಭಾವ್ಯತೆಯ ಯಾವ ಬೆಲೆಯೂ ಇನ್ನಾವ ಬೆಲೆಯಷ್ಟೇ ಸಂಭಾವ್ಯವಾಗಿದ್ದ ಪಕ್ಷದಲ್ಲಿ ಈ ಘಟನೆಗಳ ಅತಿ ನಿಖರ ಸಂಭಾವ್ಯತೆಯೂ m:ಟಿ ಆಗಿರುತ್ತದೆ ಎಂಬ ಪ್ರಮೇಯ ಸಾಧಿಸಿದ. ಮುಂದೆ 1774ರಲ್ಲಿ ಲಾಪ್ಲಾಸ್ (1749-1827) ಸ್ವಲ್ಪಹೆಚ್ಚು ಕಡಿಮೆ ಇದೇ ವಿಷಯ ಸಾಧಿಸಿದ. ಸುಪ್ರಸಿದ್ಧವಾದ ಬೇಯೀಸ್ ಲಾಪ್ಲಾಸ್ ಪ್ರಮೇಯದ ನಿರೂಪಣೆ ಹೀಗಿದೆ: ದತ್ತ ಘಟನೆಗಳ ದತ್ತ ಆವರ್ತಾಂಕಗಳ ಹಾಗೂ ಅವುಗಳ ಆರಂಭ ಸಂಭಾವ್ಯತೆಯ ಆಧಾರದ ಮೇಲೆ ಘಟನೆಗಳ ಸಂಭಾವ್ಯತೆಯನ್ನು ಕಂಡು ಹಿಡಿಯಬಹುದು.
(ಡಿ.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ